Chief Editor
Manohar. R (Manu)
Photo Journalist
chitrataramanu@gmail.com
+91 9845549026
ಭರತನ ಒಡಲಲ್ಲಿ ಭಾರ್ಗವನ ಕಡಲು - 3.5/5 ****
Posted date: 04 Sat, Mar 2023 09:30:36 AM
ಅತಿಯಾದ  ಸ್ನೇಹ, ಪ್ರೀತಿ ಎನ್ನುವುದು ಮನುಷ್ಯನನ್ನು ಯಾವ ಹಂತಕ್ಕೆ ತೆಗೆದುಕೊಂಡು ಹೋಗುತ್ತದೆ ಎಂಬುದನ್ನು  ಕಡಲತೀರದ ಭಾರ್ಗವ ಚಿತ್ರದ ಮೂಲಕ ನಿರ್ದೇಶಕ ಪನ್ನಗ ಸೋಮಶೇಖರ್ ಹೇಳಿದ್ದಾರೆ.  ಮನುಷ್ಯ ಭಾವನಾಜೀವಿ ಎನ್ನುತ್ತಾರೆ. ಒಮ್ಮೊಮ್ಮೆ ಆತ ಕಟ್ಟಿಕೊಂಡು ಕಲ್ಪನಾಲೋಕ ಆತನನ್ನು ಯಾವ ಹಂತಕ್ಕೆ ತೆಗೆದಿಕೊಂಡು ಹೋಗುತ್ತದೆ ಎಂಬುದನ್ನು ಸಾಮಾನ್ಯ ಪ್ರೇಕ್ಷಕರಿಗೂ ಅರ್ಥವಾಗುವ ಹಾಗೆ ಈ ಚಿತ್ರದಲ್ಲಿ  ಪನ್ನಗ ಸೋಮಶೇಖರ್ ನಿರೂಪಿಸಿದ್ದಾರೆ. ಭರತ್(ಭರತ್‌ಗೌಡ) ಹಾಗೂ ಭಾರ್ಗವ (ವರುಣ್‌ರಾಜು) ಚಿಕ್ಕವರಿದ್ದಾಗಿಂದಲೂ ಪ್ರಾಣ ಸ್ನೇಹಿತರು. ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು ಹಚ್ಚಿಕೊಂಡಿದ್ದ ಅವರು ದೊಡ್ಡವರಾದ ಮೇಲೆ  ಏನಾಗುತ್ತಾರೆ ಎನ್ನುವುದೇ ಚಿತ್ರದ ಕಥೆ. 

ನಾಯಕಿ ಇಂಪನಾ (ಶೃತಿ ಪ್ರಕಾಶ್) ವಿಚಾರವಾಗಿ ಸ್ನೇಹಿತರಿಬ್ಬರಲ್ಲೂ ಒಡಕು ಮೂಡುತ್ತದೆ. ಇದೇ ಕಾರಣಕ್ಕೆ ಇಬ್ಬರಲ್ಲೂ ಹಲವಾರು ಸಲ ಜಗಳವೂ ನಡೆಯುತ್ತದೆ, ಇಬ್ಬರಿಗೂ ಹೋಲಿಸಿದರೆ ಭಾರ್ಗವ ಸ್ವಲ್ಪ ಮುಂಗೋಪಿ.  ಇತ್ತ ಕೆಟ್ಟವನೂ ಅಲ್ಲ, ಒಳ್ಳೆಯವನೂ ಅಲ್ಲ.  ವಿಲನ್ ಶೇಡ್ ಇರುವ ನಾಯಕ. ಕಡಲ ತಡಿಯಲ್ಲಿ ನಡೆಯುವ  ಇಡೀ ಚಿತ್ರದ ಬಹುತೇಕ ಕಥೆ ಭರತ್ ಹಾಗೂ ಭಾರ್ಗವನ ಪಾತ್ರಗಳ ಮೇಲೇ ಸಾಗುತ್ತದೆ. ಒಂದು ಹಂತದಲ್ಲಿ ಭರತ್ ಅತಿಯಾದ ಮದ್ಯ , ಡ್ರಗ್ಸ್  ಸೇವನೆಯಿಂದಾಗಿ  ಮಾನಸಿಕ ಅಸ್ವಸ್ಥನಾಗುತ್ತಾನೆ. ಆತನನ್ನು ಶಾಂತಿ ಸಾಧನ ರಿಹ್ಯಾಬಿಟೇಶನ್ ಸೆಂಟರ್‌ಗೆ ಸೇರಿಸಿ ಸೂಕ್ತ ಚಿಕಿತ್ಸೆ ನೀಡಲಾಗುತ್ತದೆ. ಅಲ್ಲೂ ಸಹ ಭರತ್ ಮೊದಲಿನಂತಾಗುವುದಿಲ್ಲ. ಆತನಿಗೆ ಚಿಕಿತ್ಸೆ ನೀಡುತ್ತಿದ್ದ ಡಾಕ್ಟರ್ ಥಾಮಸ್ (ಕೆಎಸ್. ಶ್ರೀಧರ್) ಭರತ್ ಮನಸಿಲ್ಲಿರುವ ಕಲ್ಪನೆಯ ಬಗ್ಗೆ  ಅರಿತುಕೊಂಡು ಚಿಕಿತ್ಸೆ ನೀಡಲು ಪ್ರಯತ್ನಿಸುತ್ತಾರೆ. ನಾಯಕಿ ಇಂಪನಾ ಡಾಕ್ಟರ್ ಥಾಮಸ್ ಪುತ್ರಿಯೂ ಹೌದು. ಇತ್ತ ಇಂಪನಾಳ ತಾಯಿ   ಇನ್‌ಸ್ಪೆಕ್ಟರ್ ಡೇವಿಡ್ ಗೆ ಆಕೆಯನ್ನು ಕೊಟ್ಡು ಮದುವೆ ಮಾಡಬೇಕೆಂದು ನಿರ್ಧರಿಸಿರುತ್ತಾಳೆ.  ಈ ಎಲ್ಲ ಗೊಂದಲಗಳ ಹಿಂದೆ ಇರುವ  ಮರ್ಮವೇನು, ಭರತ್ ಮೊದಲಿನಂತಾದನೇ, ಭಾರ್ಗವ ಸರಿದಾರಿಗೆ ಬಂದನೇ,  ಈ ಎಲ್ಲ  ಪ್ರಶ್ನೆಗಳಿಗೆ  ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ನಿರ್ದೇಶಕರು ಉತ್ತರ ನೀಡಿದ್ದಾರೆ. ಚಿತ್ರ ಆರಂಭವಾಗಿ ಕೊನೆಯವರೆಗೂ ಕುತೂಹಲವನ್ನು ನಿರ್ದೇಶಕ ಪನ್ನಗ ಸೋಮಶೇಖರ್ ಅವರು ಕಾಯ್ದುಕೊಂಡು ಹೋಗಿದ್ದಾರೆ. ವೀಕ್ಷಕರಿಗೆ ಕಥೆ ಹೀಗೂ ಇರಬಹುದಾ ಎಂದು  ಊಹಿಸಿಕೊಳ್ಳಲು ಅವಕಾಶವೇ ಇಲ್ಲದ ಹಾಗೆ ಬಹು ಬುದ್ದಿವಂತಿಕೆಯಿಂದ ಚಿತ್ರವನ್ನು ತೆಗೆದುಕೊಂಡು ಹೋಗಿದ್ದಾರೆ.  ಅನಿಲ್ ಸಿ.ಜೆ. ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಎರಡು ಹಾಡುಗಳು ಸದಾ ಗುನುಗುವಂತಿವೆ. ಜೊತೆಗೆ ಕೀರ್ತನ್ ಪೂಜಾರಿ ಅವರ ಕ್ಯಾಮೆರಾ ವರ್ಕ್ ಕೂಡ ಉತ್ತಮವಾಗಿದೆ. ಆಕ್ಷನ್ ದೃಶ್ಯಗಳಲ್ಲಿ  ನಾಯಕರಿಬ್ಬರೂ ಒಬ್ಬರನ್ನೊಬ್ಬರು ಮೀರಿಸುವಂತೆ ಅಭಿನಯಿಸಿದ್ದಾರೆ, ನಾಯಕಿ ಶೃತಿ  ಪ್ರಕಾಶ್ ಕೂಡ ಅಷ್ಟೇ ಮುದ್ದಾಗಿ ತೆರೆಮೇಲೆ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಪ್ರೀತಿ, ಪ್ರೇಮದ ಕಥೆಯ ಜೊತೆಗೆ ಸ್ನೇಹಸಂಬಂಧದ. ಪ್ರಖರತೆ ಎಷ್ಟಿರುತ್ತೆ ಎಂಬುದನ್ನು  ಕಡಲತೀರದ ಭಾರ್ಗವ ಮೂಲಕ ಹೇಳಲಾಗಿದೆ. ಚಿತ್ರದ ಸಂಭಾಷಣೆಗಳೂ ಕ್ಯಾಚಿಯಾಗಿದ್ದು,  ಹಿನ್ನೆಲೆ ಸಂಗೀತ ಪೂರಕವಾಗಿ ಮೂಡಿಬಂದಿದೆ. ಪ್ರಮುಖವಾಗಿ ಐದು ಪಾತ್ರಗಳನ್ನಿಟ್ಟುಕೊಂಡು ಸುಂದರವಾದ ಭಾವನಾತ್ಮಕ ಕಥಾಹಂದರವನ್ನು ತೆರೆಯ ಮೇಲೆ ನಿರೂಪಿಸಲಾಗಿದೆ. ನಮ್ಮ ಮನದಲ್ಲಿ ಏನೇ ವಿಷಯ ಅಡಗಿದ್ದರೂ ಅದನ್ನು ಮಾತಾಡದೆ ಹೋದರೆ ಕೊನೆಗದು ಯಾವ ಹಂತ ತಲುಪಬಹುದು, ಒಂದು ನಗುವಿಗೆ ಅದೆಂಥ ಶಕ್ತಿಯಿದೆ ಎಂಬುದನ್ನು   ಈ ಚಿತ್ರ ಹೇಳಲಿದೆ. ಒಟ್ಟಾರೆ  ಕಡಲತೀರದ ಭಾರ್ಗವ ಒಂದು ಫೀಲ್‌ಗುಡ್ ಸಿನಿಮಾ ಎಂದು ಹೇಳಬಹುದು.
Kannada Cinema's Latest Wallpapers
Kannada Cinema's Latest Videos
Kannada Movie/Cinema News - ಭರತನ ಒಡಲಲ್ಲಿ ಭಾರ್ಗವನ ಕಡಲು - 3.5/5 **** - Chitratara.com
Copyright 2009 chitratara.com Reproduction is forbidden unless authorized. All rights reserved.